ಪ್ರೇಮ ದೂತ

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ
ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ

ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು
ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು

ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ
ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ

ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ
ದೇಹತೃಷೆಯ ಮೀರಿರುವ ಬಂಧನವು ಸವೆಯದಂಥ ಖಾದ್ಯ

ನಿನ್ನ ಹೃದಯ ದೇಗುಲವ ಸಿಂಗರಿಪ ಭಾಗ್ಯವಂತ ನಾನು
ನನ್ನ ಮನವ ಸಿಂಗರಿಪ ಮಾನಿನಿಯೆ ಚಿಂತೆ ಬೇಡವೇನು

ದೂರ ದೂರದಲಿ ಕಾಂಬ ಗುಡ್ಡವದು ಮಾಲೆಮಾಲೆ ನೀಲಿ
ಮುಳ್ಳುಕಲ್ಲುಗಳು ಅಲ್ಲಿ ಬಹಳ ಇವೆ ನಡೆಯಬೇಕು ತೇಲಿ

ಚೆಲುವೊ ಒಲವೊ ಬಾಳೆಲ್ಲ ಭವ್ಯತೆಗೆ ಏರೆ ಮಾತ್ರ ಯೋಗ್ಯ
ಬಣ್ಣ ಬದುಕು ಬರಡಾದ ಮೇಲು ಉಳಿಯುವುದು ಪ್ರೇಮ ಭಾಗ್ಯ

ಕೂಡುವಂಥ ಸುಖಕಿಂತ ಕೂಟ ಹಾರೈಕೆ ಸೊಗಸು ಏನೊ
ತಿನ್ನುವಂಥ ಸವಿಗಿಂತ ತಿನ್ನಲಿಹ ಬಯಕೆ ರುಚಿಯೊ ಏನೊ

ತನುವು ಹುಟ್ಟಿ ಬೆಳೆದಾಡಿ ಅಳಿಯುವುದು ನಿತ್ಯಜೀವ ಯಾತ್ರೆ
ಮನದ ಭಾವ ಶ್ರೀಮಂತ ಲೀಲೆಯದು ಸತ್ಯ ಚೈತ್ಯ ಯಾತ್ರೆ

ನಮ್ಮ ಜನ್ಮಗಳ ಗಂಟು ಎನ್ನುವರು ಗಂಡು ಹೆಣ್ಣು ಜೋಡಿ
ಜೋಡಿ ಜೋಡಿಗಳು ಒಂದೆ ಎಂದರೇಕಿಷ್ಟು ಹೆಚ್ಚು ರಾಡಿ

ಹಿಂದು ಮುಂದು ಜನುಮಗಳ ಕಂಡವರು ಯಾರೊ ಎಲ್ಲೋ ಏನೊ
ಇಂದು ನಾಳೆಗಳು ನಮ್ಮ ಕೈಯಲಿವೆ ಕೂಡಿ ಬಾಳೆ ಜೇನೊ

ಏನೂ ಅಳಿಯುವುದು ಏನೊ ಉಳಿಯುವುದು ಉಳಿವುದೊಂದೆ ಗುರಿಯು
ಇಹವು ಕಳೆದರೂ ಪರವು ಉಳಿಯುವುದು ಜೀವಿಗದುವೆ ಗುರಿಯು

ಅಂದು ಕೊಳ್ಳುವುದು ಆಡಿಕೊಳ್ಳುವುದು ಮಾತು ಬರಹವೊಂದು
ಮಾಡಿಕೊಳ್ಳುವುದು ಕಂಡು ಕೊಳ್ಳುವುದು ನಡತೆ ಬೇರೆಯೊಂದು

ಉದ್ದ ಉದ್ದ ಮೈಲುದ್ದ ಬರೆದರೇನೊಂದು ಮಾಡದಲ್ಲೆ
ಮೆರಗು ಬೆರಗು ಬುರುಗೆಲ್ಲ ಹೋಗಿರಲು ಪ್ರೇಮ ನೋಡೆ ನಲ್ಲೆ

ಏನು ಬಯಸದೆಯೆ ಬಂದುದನ್ನು ವರವೆಂದು ತಿಳಿಯೆ ಸುಖವು
ಗುಡ್ಡದಾಸೆ ಬರಿಕಡ್ಡಿಯಾಗಿ ಹೋದೀತು ಗುಳ್ಳೆ ಮುಖವು

ನನಗೆ ನೀನು ನಾ ನಿನಗೆ ಎನ್ನುವುದು ಕೆಲವು ದಿನದ ಸೆಳೆತ
ನೀನು ನಾನು ಬೇರೊಬ್ಬಗಾಗಿ ಎನ್ನುವುದು ಕೊನೆಯ ಎಳೆತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಸರಿಸಲಾರದ ಸಂಬಂಧಗಳು !
Next post ಲಿಂಗಮ್ಮನ ವಚನಗಳು – ೫೪

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys